ಕೊರೋನ ಲಸಿಕೆ ಪಡೆಯಲು ಹಿಂಜರಿಯುತಿದ್ದವರ ಮನವೊಲಿಸಿ,
ಪ್ರತಿರೋಧ ತೋರಿದವರನ್ನ ಸೌಮ್ಯವಾಗಿ ಗದರಿಸಿ, ಅವರಿಗೆ
ತಿಳುವಳಿಕೆ ನೀಡುವ ಮೂಲಕ ಲಸಿಕೆ ನೀಡಲಾಯಿತು.
ಹರಿಹರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ನಡೆದ
ಲಸಿಕಾ ಅಭಿಯಾನದಲ್ಲಿ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಅವರು ವಿವಿಧ ಸಬೂಬು ಹೇಳಿ
ತಪ್ಪಿಸಿಕೊಳ್ಳುತ್ತಿದ್ದವರಿಗೆ ಅವರ ಆತಂಕವನ್ನು ದೂರಗೊಳಿಸಿ ಲಸಿಕೆ
ಪಡೆಯಲು ಮನವೊಲಿಸುವಲ್ಲಿ ಯಶಸ್ವಿಯಾದರು.
ಪಟ್ಟಣದ ನೀಲಕಂಠೇಶ್ವರ ನಗರ, ಬೆಂಕಿ ನಗರ, ಕಾಳಿದಾಸ
ನಗರ ಹಾಗೂ ಹಳ್ಳದ ಕೇರಿ ಬಡಾವಣೆಗಳಲ್ಲಿ ಮೊದಲ ಹಾಗೂ
ಎರಡನೇ ಡೋಸ್ ಪಡೆಯದ ಎಲ್ಲ ಅರ್ಹರಿಗೂ ಲಸಿಕೆ ನೀಡಲಾಯಿತು.
ನಂತರ ಜಿಲ್ಲಾಧಿಕಾರಿಗಳು ಪತ್ರಕರ್ತರೊಂದಿಗೆ ಮಾತನಾಡಿ,
ಮುಖ್ಯಮಂತ್ರಿಯವರು ಜಿಲ್ಲೆಯ ಲಸಿಕೆ ನೀಡಿಕೆ ಪ್ರಮಾಣ
ಕಡಿಮೆಯಿದ್ದು ತೀವ್ರಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ,
ಕಳೆದ ಮೂರು ದಿನಗಳಿಂದ ಲಸಿಕೆ ನೀಡಿಕೆ ಪ್ರಮಾಣವನ್ನು
ಮತ್ತಷ್ಟು ತೀವ್ರಗೊಳಿಸಿದ್ದು ಕಳೆದೆರಡು ದಿನಗಳಲ್ಲಿ 25
ಸಾವಿರದಷ್ಟು ಲಸಿಕೆ ನೀಡಿದ್ದು, ಇಂದೂ ಕೂಡ 25 ರಿಂದ 30 ಸಾವಿರದಷ್ಟು
ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕೆಲ ಹಿಂದುಳಿದ ಪ್ರದೇಶಗಳಲ್ಲಿ
ಲಸಿಕೆ ಬಗೆಗೆ ಹಿಂಜರಿಕೆ ಹಾಗೂ ತಪ್ಪು ಕಲ್ಪನೆ ಇದ್ದು ಅವುಗಳನ್ನು
ಹೋಗಲಾಡಿಸುವ ಮೂಲಕ ಲಸಿಕೆ ನೀಡಲಾಗುತ್ತಿದೆ ಎಂದರು.
ಮೂರನೇ ಅಲೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ
ಅವರು, ಈಗಾಗಲೆ  ಮೂರ್ನಾಲ್ಕು ತಿಂಗಳಿನಿಂದ ಮೂರನೇ ಅಲೆ
ಎದುರಿಸಲು ಜಿಲ್ಲೆಯಲ್ಲಿ ಸಿದ್ದತೆ ಮಾಡಿಕೊಂಡಿದ್ದೇವೆ. ಅಗತ್ಯ ಔಷಧಿ,
ವೆಂಟಿಲೇಟರ್, ಮಕ್ಕಳ ಐಸಿಯು, ಮಾನವ ಸಂಪನ್ಮೂಲ
ತರಬೇತಿಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು
ಸಿದ್ದವಾಗಿವೆ ಹಾಗೂ ಹೊರ ರಾಜ್ಯ, ಹೊರ ದೇಶಗಳಿಂದ ಬರುವವರ
ವಿವರ ಪಡೆದು, ನಮ್ಮ ಸರ್ವೇಕ್ಷಣಾ ತಂಡ ಅವರುಗಳ ತಪಾಸಣೆ
ನಡೆಸಿ, ರೋಗ ಲಕ್ಷಣಗಳು ಕಂಡುಬಂದರೆ ಅಂತಹವರನ್ನು
ಐಸೋಲೇಟ್ ಮಾಡಲಾಗುತ್ತಿದ್ದು ಮತ್ತಷ್ಟು ಕಟ್ಟೆಚ್ಚರ
ವಹಿಸಲಾಗುತ್ತಿದೆ.


ಸೋಮವಾರದಂದು ದಾವಣಗೆರೆ ನಗರಕ್ಕೆ ಆಗಮಿಸಿದ್ದ
ಮುಖ್ಯಮಂತ್ರಿಗಳು ಗರಿಷ್ಠ ಸಂಖ್ಯೆಯ ಟೆಸ್ಟ್‍ಗಳನ್ನು
ಮಾಡುವುದು ಹಾಗೂ ಹೆಚ್ಚು ಜನ ಜಂಗುಳಿ ಸೇರದಂತೆ
ನೋಡಿಕೊಳ್ಳುವುದು ಮತ್ತು ಶಾಲಾ ಕಾಲೇಜುಗಳಲ್ಲಿ ಸಾಂಸ್ಕøತಿಕ
ಕಾರ್ಯಕ್ರಮಗಳನ್ನು ಮುಂದೂಡಲು ಕ್ರಮ ವಹಿಸುವಂತೆ
ಸೂಚಿಸಿದ್ದಾರೆಂದರು.

ಲಸಿಕಾ ಅಭಿಯಾನದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಡಾ.
ನಟರಾಜ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ನಗರಸಭೆ
ಪೌರಾಯುಕ್ತೆ ಲಕ್ಷ್ಮಿ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ
ನಜ್ಮ, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *