ಚನ್ನಗಿರಿ : ತಾಲೂಕಿನಲ್ಲಿ ಅತಿ ಹೆಚ್ಚು ಅಡಕೆ ಬೆಳೆಯುವುದರಿಂದ ಅಡಕೆ ಬೆಳೆಗಾರರ ಹಿತರಕ್ಷಣೆ ಹಾಗೂ ಅಡಕೆ ಮೌಲ್ಯವರ್ಧನೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.

ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ, ತಿಪ್ಪಗೊಂಡನಹಳ್ಳಿ, ಹೊನ್ನೇಬಾಗಿ, ಅಜ್ಜಿಹಳ್ಳಿ, ನಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಚನ್ನಗಿರಿ ತಾಲೂಕಿನಲ್ಲಿ ಅಡಕೆ ಉಪ ಉತ್ಪನ್ನಗಳ ತಯಾರಿಕಾ ಘಟಕಳಿಗೆ ಪ್ರೋತ್ಸಾಹ ನೀಡಿದರೆ ಉದ್ಯೋಗ ಸೃಜನೆಯ ಜೊತೆಗೆ ಅಡಕೆ ಬೆಳೆಗಾರರ ಹಿತ ಕಾಪಾಡಬಹುದು. ತಾಲೂಕಿನಲ್ಲಿ ವಿಶೇಷ ಆರ್ಥಿಕ ವಲಯ ಸೃಜನೆಗೆ ವಿಫುಲ ಅವಕಾಶಗಳಿದ್ದು, ಅವುಗಳ ಯಶಸ್ವಿ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ತುಮ್ಕೋಸ್ಗೆ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಬೆಳೆಗಾರರು ಅಡಕೆ ತಂದು ಮಾರಾಟ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಆರ್ಥಿಕ ವಹಿವಾಟು ನಡೆಯುತ್ತಿದ್ದು, ಅಡಕೆ ಉಪ ಉತ್ಪನ್ನ ತಯಾರಿಕಾ ಘಟಕಗಳು ಪ್ರಾರಂಭವಾದರೆ ಯುವಕರಿಗೆ ಉದ್ಯೋಗ ದೊರೆಯಲಿದೆ. ಅಲ್ಲದೆ ಪರೋಕ್ಷವಾಗಿ ಅನೇಕ ಕುಟುಂಬಗಳಿಗೆ ಸಹಾಯವಾಗಲಿದೆ. ತಾಲೂಕಿನಲ್ಲಿ ವಿಶೇಷ ಆರ್ಥಿಕ ವಲಯ ರಚನೆ ಮಾಡಲು ನನಗೆ ಮತ ನೀಡುವ ಮೂಲಕ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಚನ್ನಗಿರಿ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೂ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಶಾಂತಿಸಾಗರದಲ್ಲಿ ಅತಿಥಿ ಗೃಹ, ಜಲಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜನ ಬಯಸಿದ್ದಾರೆ. ದೇಶದ ಎಲ್ಲ ಭಾಗದಲ್ಲೂ ಬಿಜೆಪಿ ಪರ ಅಲೆ ಇದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಜನ ಕೂಡ ಈಗಾಗಲೇ ನನ್ನನ್ನು ಗೆಲ್ಲಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ. ಜನರಿಗೆ ಗೊತ್ತಿದೆ ಇಲ್ಲಿ ನಾನು ಗೆದ್ದರೆ ಅಲ್ಲಿ ಮೋದಿ ಜೀ ಅವರು ಗೆದ್ದಂತೆ. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಮೋದಿ ಜೀ ಅವರ ಗೆದ್ದಂತೆ ಎಂದು ಜನ ಅರಿತುಕೊಂಡಿದ್ದಾರೆ. ನೀವು ಕೂಡ ನನ್ನ ಕಮಲದ ಗುರುತಿಗೆ ಮತ ನೀಡುವ ಮೂಲಕ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಸಂಸದ ಸಿದ್ದೇಶಣ್ಣ ಅವರು ಚನ್ನಗಿರಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಹೊರತುಪಡಿಸಿ ಕೇಂದ್ರದಿಂದ ವಿವಿಧ ಯೋಜನೆಗಳಲ್ಲಿ ಅನುದಾನ ತಂದು ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಈಗ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿದರೆ ಚನ್ನಗಿರಿ ತಾಲೂಕು ಮಾದರಿ ತಾಲೂಕನ್ನಾಗಿ ಅಭಿವೃದ್ಧಿ ಮಾಡುತ್ತಾರೆ ಎಂದರು.

ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಡಕೆ ಬೆಳೆಗಾರರಿಗೆ ಅನೂಕೂಲವಾಗಿದೆ. ಮೊದಲು ಬೇರೆ ರಾಷ್ಟ್ರದಿಂದ ಕಡಿಮೆ ಬೆಲೆಗೆ ಆಮದು ಮಾಡಿಕೊಂಡು ಇಲ್ಲಿನ ರೈತರಿಗೆ ತೊಂದರೆ ಕೊಡುತ್ತಿದ್ದರು. ಈಗ ಬೇರೆ ರಾಷ್ಟ್ರದಿಂದ ಆಮದು ಮಾಡಿಕೊಂಡರೂ ಆಮದು ಬೆಲೆ ನಿಗದಿ ಮಾಡಿದ್ದಾರೆ. ಹಾಗಾಗಿ ಅಡಕೆ ಬೆಲೆ 35 ಸಾವಿರಕ್ಕಿಂತ ಕಡಿಮೆ ಆಗುತ್ತಿಲ್ಲ. ಮೋದಿ ಅವರು ರೈತರಿಗೆ ಬೆಲೆ ಗ್ಯಾರಂಟಿ ಕೊಟ್ಟಿದ್ಧಾರೆ ಎಂದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಪತ್ನಿ ಕಮಲಾ ನಿರಾಣಿ, ಮಂಡಲ ಅಧ್ಯಕ್ಷರು , ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.

ರಾಜ್ಯದ ಜನರ ಜೀವಕ್ಕೆ ಗ್ಯಾರಂಟಿ ಯಾರು..?

ನಲ್ಲೂರು ಪ್ರಚಾರದಲ್ಲಿ ಮಾತನಾಡಿದ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು, ಮಾತೆತ್ತಿದರೆ ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಾಲು ಸಾಲು ಹತ್ಯೆಗಳು ಆಗುತ್ತಿವೆ. ಜನ ನಿರ್ಭೀತಿಯಿಂದ ಮನೆಬಿಟ್ಟು ಹೊರಬರಲು ಯೋಚಿಸುವಂತಾಗಿದೆ, ರಾಜ್ಯದ ಜನರ ಜೀವಕ್ಕೆ ಗ್ಯಾರಂಟಿ ಕೊಡುವವರು ಯಾರು..? ಎಂದು ಪ್ರಶ್ನಿಸಿದರು. ಹತ್ಯೆಗಳ ಬಳಿಕೆ ತನಿಖಾ ಸಂಸ್ಥೆ ವರದಿ ಕೊಡುವ ಮುನ್ನವೇ ನೀವು ಮತ್ತು ನಿಮ್ಮ ಗೃಹ ಸಚಿವರು ಒಂದು ಕೋಮಿನವರನ್ನು ದೃಷ್ಟಿಯಲ್ಲಿಟ್ಟುಕೊಂಡು ಓಲೈಕೆ ಹೇಳಿಕೆ ನೀಡುತ್ತೀರಿ, ಇದು ತುಷ್ಟಿಕರಣದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನವಮಿ ದಿನ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲೂ ಅನ್ಯ ಕೋಮಿನ ಯುವಕರು ಹಿಂದು ಯುವಕರಿಗೆ ಚಾಕು ಇರಿದು ಹಲ್ಲೆ ಮಾಡಿದ್ಧಾರೆ. ಅದೃಷ್ಟವಶಾಂತ್ ಇಬ್ಬರು ಯುವಕರು ಪ್ರಾಣಾಪಯದಿಂದ ಪಾರಾಗಿದ್ಧಾರೆ. ಇಂತಹ ಜಿಹಾದಿ ಕೃತ್ಯಗಳು ನಡೆಯಬಾರದು ಎಂದರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು. ನೀವೆಲ್ಲರೂ ಬಿಜೆಪಿ ಬೆಂಬಲ ಮಾಡಿದರೆ ದೇಶದಲ್ಲಿ, ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ. ಜಿಹಾದಿ ಮನಸ್ಥಿತಿಯ ಕ್ರಿಮಿನಲ್ಗಳು ಬಾಲ ಮುಚ್ಚಿಕೊಂಡು ಇರುತ್ತಾರೆ ಎಂದರು. ನಲ್ಲೂರಿನಲ್ಲಿ ಚಾಕು ಇರಿತದಿಂದ ಗಾಯಗೊಂಡಿದ್ದ ಯುವಕರ ಮನೆಗೆ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ತೆರಳಿ ಆರೋಗ್ಯ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿದರು.

Leave a Reply

Your email address will not be published. Required fields are marked *