ದಾವಣಗೆರೆ ಸೆಪ್ಟೆಂಬರ್.11 ;  2024 ನೇ ಸಾಲಿನ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಸೆಪ್ಟೆಂಬರ್ 14 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದು ತ್ವರಿತ ನ್ಯಾಯ, ಕಡಿಮೆ ವೆಚ್ಚದಲ್ಲಿ ನ್ಯಾಯದಾನ ಮಾಡಲು ರಾಜಿ, ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕಾಗಿ 8272 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
 ಅವರು ಬುಧವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸೆಪ್ಟೆಂಬರ್ 14 ರಂದು ನಡೆಯಲಿರುವ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ಕುರಿತಂತೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಬಗೆಹರಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅದಾಲತ್‍ನಲ್ಲಿ ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂ ಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಗಣಿ ಮತ್ತು ಭೂ ವಿಜ್ಞಾನ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು ಇದರಲ್ಲಿ ವಿಚ್ಛೇದನ ಹೊರತುಪಡಿಸಿ, ಪಿಂಚಣಿ, ಚೇತನ ಭತ್ಯೆ, ವಿದ್ಯುತ್, ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕರ ವಿವಾದ, ಆಸ್ತಿ ತೆರಿಗೆ ಶೇ 5 ರಷ್ಟು ರಿಯಾಯಿತಿ ಸೇರಿದಂತೆ ಇನ್ನಿತರೆ ರಾಜಿಯಾಗಬಲ್ಲ ಪ್ರಕರಣಗಳಲ್ಲಿ ಲೋಕ್ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದ್ದು ಇದರಿಂದ ಕಕ್ಷಿದಾರರು ಹಾಗೂ ಎದುರುದಾರರಿಗೂ ಅನುಕೂಲವಾಗಲಿದೆ ಎಂದರು.
 ದಾವಣಗೆರೆ ಜಿಲ್ಲೆಯಲ್ಲಿ ಸೆಪ್ಟೆಂಬರ್ 9 ರವರೆಗೆ ಒಟ್ಟು 42523 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು ಇದರಲ್ಲಿನ 8272 ಪ್ರಕರಣಗಳನ್ನು ಅದಾಲತ್‍ನಲ್ಲಿ ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ. ಮತ್ತು ಈಗಾಗಲೇ ವಿವಿಧ ಬೈಠಕ್‍ಗಳ ಮೂಲಕ ರಾಜಿ, ಸಂಧಾನ ಮಾಡಿರುವ 3442 ಪ್ರಕರಣಗಳು ಮತ್ತು 63464  ವ್ಯಾಜ್ಯಪೂರ್ವ ಪ್ರಕರಣಗಳನ್ನು ಸೆಪ್ಟೆಂಬರ್ 14 ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಮಾಡಲು ಗುರಿ ಹೊಂದಲಾಗಿದೆ. ಈ ಹಿಂದೆ ನಡೆದ ಲೋಕ್ ಅದಾಲತ್‍ನಲ್ಲಿ 2023 ರ ಸೆಪ್ಟೆಂಬರ್ 9 ರಂದು 4224 ಬಾಕಿ ಪ್ರಕರಣಗಳು ಹಾಗೂ 99140 ವ್ಯಾಜ್ಯಪೂರ್ವ ಪ್ರಕರಣ, 2024 ರ ಮಾರ್ಚ್ 16 ರಂದು ನಡೆದ ಅದಾಲತ್‍ನಲ್ಲಿ 4568 ಬಾಕಿ ಪ್ರಕರಣಗಳು ಹಾಗೂ 144773 ವ್ಯಾಜ್ಯ ಪೂರ್ವ ಪ್ರಕರಣ, 2024 ರ ಜುಲೈ 13 ರಂದು ನಡೆದÀ ಲೋಕ್ ಅದಾಲತ್‍ನಲ್ಲಿ 7944 ಬಾಕಿ ಪ್ರಕರಣಗಳು ಮತ್ತು 255139 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಸೆಪ್ಟೆಂಬರ್ 14 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು ಈ ವೇಳೆ ವ್ಯಾಜ್ಯ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಲು ದಾವಣಗೆರೆ ತಾಲ್ಲೂಕಿನ ಬಾವಿಹಾಳ, ಓಬಣ್ಣನಹಳ್ಳಿ ಹಾಗೂ ಶ್ರೀ ರಂಗಯ್ಯನಮಟ್ಟಿ (ಗುಡ್ಡದಕ್ಯಾಪ್) ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಆಯಾ ತಾಲ್ಲೂಕಿನಲ್ಲಿ ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಆಯ್ಕೆ ಮಾಡಿ ಘೋಷಣೆ ಮಾಡಲಾಗುತ್ತದೆ ಎಂದರು.
ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕರು, ಕಕ್ಷಿದಾರರು ರಾಜಿ, ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಆಯಾ ತಾಲ್ಲೂಕಿನ ನ್ಯಾಯಾಲಯದಲ್ಲಿ ಭಾಗವಹಿಸಬಹುದಾಗಿದೆ. ಮತ್ತು ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ ಮೂಲಕ ಲಿಂಕ್ ನೀಡಲಿದ್ದು ವೀಡಿಯೋ ಕಾನ್ಪರೆನ್ಸ್ ಮೂಲಕವೂ ಅದಾಲತ್‍ನಲ್ಲಿ ಭಾಗಿಯಾಗಬಹುದಾಗಿದೆ ಎಂದರು.
 ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ ಕಳೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 18 ಪತಿ, ಪತ್ನಿಯರು ಒಂದಾಗಿದ್ದರು. ಈ ಭಾರಿಯು 17 ಪತಿ, ಪತ್ನಿಯರು ಒಂದಾಗಲು ಮುಂದಾಗಿದ್ದು ಈಗಾಗಲೇ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಿಗೆ ಭೇಟಿ ನೀಡಿ ಬೈಠಕ್‍ಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದ್ದು ಜಗಳೂರಿನಲ್ಲಿ ನಡೆದ ಬೈಠಕ್ ಒಂದರಲ್ಲಿ 35 ಪ್ರಕರಣಗಳನ್ನು ಒಂದೇ ದಿನ ರಾಜಿ, ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದರು.
 ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ ರಾಷ್ಟ್ರೀಯ ಲೋಕ್ ಅದಾಲತ್‍ಗೆ ಬೇಕಾದ ಎಲ್ಲಾ ಸಹಕಾರವನ್ನು ಇಲಾಖೆ ನೀಡಲಿದ್ದು ಹೆಚ್ಚು ಜನರು ಇದರ ಅನುಕೂಲ ಪಡೆಯುವ ಮೂಲಕ ತ್ವರಿತ ನ್ಯಾಯದಾನ ಸಿಗಲಿದೆ ಎಂದರು.
 ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್.ಅರುಣ್‍ಕುಮಾರ್, ಕಾರ್ಯದರ್ಶಿಯಾದ ಎಸ್.ಬಸವರಾಜ್, ಜಂಟಿ ಕಾರ್ಯದರ್ಶಿ ಮಂಜುನಾಥ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *