ದಾವಣಗೆರೆ: ನಗರದ ಮಿಲ್ಲತ್ ಎಜುಕೇಶನ್ ಅಂಡ್ ವೆಲ್ಫೇರ್ ಸೊಸೈಟಿ ಆಶ್ರಯದಲ್ಲಿ ಮಿಲ್ಲತ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಿಲ್ಲತ್ ಎಜುಕೇಶನ್ ಅಂಡ್ ವೆಲ್ಫೇರ್ ಟ್ರಸ್ಟ್ ನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು, ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ಹೋರಾಡಿದ ಮಹನೀಯರ ನೆನಪು ಮಾಡಿಕೊಳ್ಳಬೇಕಾದ ದಿನ. ಮಹಾತ್ಮಾ ಗಾಂಧೀಜಿ, ಜವಾಹರ ಲಾಲ್ ನೆಹರು, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಸರೋಜಿನಿ ನಾಯ್ಡು, ಲಾಲಾ ಲಜಪತ್ ರಾಯ್, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗ ಸ್ಮರಿಸಿಕೊಳ್ಳೋಣ ಎಂದು ಹೇಳಿದರು.
ಭಾರತ ದೇಶಕ್ಕೆ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯ ಬಂದಿದ್ದರಿಂದ ಭಾರತ ದೇಶವು ಮುಂದುವರಿಯಲು ಸಾಧ್ಯವಾಗಿದೆ. ಜಗತ್ತಿನಲ್ಲಿ ವೇಗವಾಗಿ ಮುಂದುವರಿಯುತ್ತಿರುವ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು, ನಾವೆಲ್ಲರೂ ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣೀಕರ್ತರಿಗೆ ಗೌರವ ಸಲ್ಲಿಸೋಣ. ವಿದ್ಯಾರ್ಥಿಗಳು ಇತಿಹಾಸ ಓದಬೇಕು. ದೇಶಕ್ಕಾಗಿ ಹೋರಾಡಿದ ಮಹನೀಯರ ಜೀವನಚರಿತ್ರೆ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಬ್ರಿಟೀಷರ ಕಪಿಮುಷ್ಠಿಯಿಂದ ಹೊರ ಬರಲು ದೇಶದಲ್ಲಿ ಭಾರೀ ಹೋರಾಟಗಳು ನಡೆದವು. ಅನೇಕ ಮಂದಿ ಹುತಾತ್ಮರಾದರು. ಹೋರಾಟಗಾರರ ತ್ಯಾಗ, ಶೌರ್ಯ ಮತ್ತು ದೃಢಸಂಕಲ್ಪದಿಂದಾಗಿ ನಾವು ಇಂದು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಸ್ವೇಚ್ಛೇಚಾರವಾಗಿ ಸ್ವಾತಂತ್ರ್ಯ ಬಳಸಿಕೊಳ್ಳಬಾರದು. ವೈವಿಧ್ಯಮಯ ದೇಶ ಭಾರತದಲ್ಲಿ ನಾವೆಲ್ಲರೂ ಹುಟ್ಟಿರುವುದು ಪುಣ್ಯ. ನಾವೆಲ್ಲರೂ ಒಗ್ಗಟ್ಟಾಗಿ, ಜಾತ್ಯಾತೀತ ಮೌಲ್ಯಗಳಿಗೆ ಅನುಗುಣವಾಗಿ ಬದುಕೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೈಯದ್ ಜುಫಿಶನ್, ಸಿದ್ದಪ್ಪ, ಝಾಕೀರ್ ಹುಸೇನ್, ಆರಿಫ್ ಅಲಿ, ಖುಷ್ತಾರು ಬೇಗಂ, ಸದ್ಕಪ್ಪ, ಸೈಯದ್ ಜೀಶನ್ ಅಲಿ, ಜುಲ್ಕರ್ ನೈನ್ ಮತ್ತು ಶಾಲೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
