ದಾವಣಗೆರೆ ಜನವರಿ 8 : ಅಂಚೆ ಕಚೇರಿಯು ಗ್ರಾಮೀಣ ಜನತೆಗೆ ನಂಬಿಕೆಯ ಹಣಕಾಸು ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದು, ಉಳಿತಾಯದ ಅಭ್ಯಾಸವು ಭವಿಷ್ಯದ ಭದ್ರತೆಯ ಮೂಲವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸಮೀಪದ ಶಾಮನೂರಿನಲ್ಲಿ ನೂತನ ಉಪ ಅಂಚೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಅಂಚೆ ಇಲಾಖೆಯ ಅಂಚೆ ಉಳಿತಾಯ ಬ್ಯಾಂಕ್ ಸೇವೆಗಳು, ವಿವಿಧ ಹಣಕಾಸು ಸೇವೆಗಳು ಹಾಗೂ ಫಿಲಟೆಲಿ (ಅಂಚೆ ಚೀಟಿ ಸಂಗ್ರಹಣೆ) ಸೇವೆಗಳ ಮಹತ್ವವನ್ನು ವಿವರಿಸಿದರು.
ಇಂದೇ ಉಳಿತಾಯ ಆರಂಭಿಸಿದರೆ ನಾಳೆಯ ಶಿಕ್ಷಣ ಮತ್ತು ಬದುಕು ಸುಭದ್ರವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಿಂಗಲ್ ಆರ್ಡಿ ಮತ್ತು ಎಸ್ಬಿ ಖಾತೆ ತೆರೆಯಬೇಕು ಎಂದು ಪ್ರೇರಣಾತ್ಮಕ ಕರೆ ನೀಡಿದರು.
ಅಲ್ಲದೆ, ಫಿಲಟೆಲಿ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು, ಇದು ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗುತ್ತದೆ ಎಂದರು.ಅAಚೆ ಅಧಿಕಾರಿಗಳು ಮೂರು ತಿಂಗಳಲ್ಲಿ ಹೊಸದಾಗಿ ಉದ್ಘಾಟನೆಯಾದ ಶಾಮನೂರು ಅಂಚೆ ಕಛೇರಿಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಚಂದ್ರಶೇಖರ, ಎಎಸ್ಪಿ (ಹೆಚ್ಕ್ಯೂ) ರೇಖಾ ಕೆ, ಎಎಸ್ಪಿ ನರೇಂದ್ರ ನಾಯಕ್ ಕೆ.ಎಂ, ಪೋಸ್ಟ್ಮಾಸ್ಟರ್ ಓಂಕಾರಮೂರ್ತಿ ಎಂ, ಪಿಎಲ್ಐ ಅಭಿವೃದ್ಧಿ ಅಧಿಕಾರಿ ಮಹೇಶ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಂತೋಷ್ ಬಿ, ಶ್ಯಾಬನೂರು ಎಸ್ಪಿಎಂ ಪ್ರಕಾಶ್, ಟ್ರಸ್ಟ್ ಚಂದ್ರಶೇಖರ್,ಪಾಲಿಕೆ ಮಾಜಿ ಸದಸ್ಯರಾದ ರುದ್ರೇಶ್ ಹಾಗೂ ಅಂಚೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
