ದಾವಣಗೆರೆ ಫೆ.20: ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು ಒದಗಿಸುವುದು ಅಷ್ಟೇ ಸಾಕಾಗುವುದಿಲ್ಲ. ಜನರಿಗೆ ಸರಿಯಾದ ಪ್ರಮಾಣದ, ಗುಣಮಟ್ಟದ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವನ್ನು ಸಮುದಾಯದ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಆಹಾರವನ್ನು ಒದಗಿಸಿದಾಗ ಮಾತ್ರ ಆಹಾರ ಭದ್ರತೆಯನ್ನು ಕೊಟ್ಟಿದ್ದೇವೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದು ಆಹಾರ ಭದ್ರತಾ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ರ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ನಮ್ಮ ರಾಜ್ಯ ಆಹಾರ ಆಯೋಗಕ್ಕೆ ಇದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ, ಇಲ್ಲಿ ಹಾಜರಿರುವ ಎಲ್ಲಾ ಇಲಾಖೆಗಳು ಸಮನ್ವಯ ಮತ್ತು ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ವಿವಿಧ ಇಲಾಖೆಗಳ ನಡುವೆ ಈ ರೀತಿಯ ಸಮನ್ವಯವನ್ನು ಸಾಧಿಸಲು ಆಹಾರ ಭದ್ರತಾ ಕಾಯ್ದೆಯ ಜಾರಿಯಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಗಳಾದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಅವರ ಕಚೇರಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಸುರಕ್ಷಿತ ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ ಸೇವೆಗಳ ಲಭ್ಯತೆ, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಪ್ರಮುಖವಾದಂತಹ ವಿಷಯಗಳು. ಇದರ ಜೊತೆಗೆ ಸಾಮಾಜಿಕ, ದೈಹಿಕ ಹಾಗೂ ಆರ್ಥಿಕ ದುರ್ಬಲತೆಗಳ ಬಗ್ಗೆ ಸ್ಪಷ್ಟವಾದ ಗಮನಹರಿಸುವುದು ಅತ್ಯಂತ ಅವಶ್ಯಕ. ಲಿಂಗ, ಜಾತಿ, ವರ್ಗ, ಉದ್ಯೋಗದ ಆಧಾರದ ಅಸಮಾನತೆಗಳು ಮತ್ತು ಬಡತನ ಈ ಸವಾಲುಗಳನ್ನು ಯಾವಾಗಲೂ ನಮ್ಮ ದೇಶವನ್ನ, ರಾಜ್ಯದಲ್ಲಿ ಇರುವಂತಹ ಸಮಸ್ಯೆಗಳು. ಆದ್ದರಿಂದ ರಾಜ್ಯದಲ್ಲಿ ಆಹಾರ ಅಭಾವ ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಬೇಕಾದರೆ ನಾವು, ನೀವೆಲ್ಲರೂ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ರ ಮತ್ತೊಂದು ಪ್ರಮುಖ ಅಂಶವೆಂದರೆ ಜೀವನ ಚಕ್ರ ದೃಷ್ಟಿಕೋನ. ಗರ್ಭಧಾರಣೆಯಿಂದ ಆರಂಭಿಸಿ ಜನನ, ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಹಾಗೂ ವೃದ್ಧಾಪ್ಯದವರೆಗೆ ಮಾನವನ ಜೀವನದ ಎಲ್ಲಾ ಹಂತಗಳ ಅಗತ್ಯಗಳನ್ನು ಈ ಕಾಯ್ದೆ ಗಮನದಲ್ಲಿಟ್ಟುಕೊಂಡಿದೆ. ಒಂದು ಹಕ್ಕು ಆಧಾರಿತ ಕಾನೂನು. ಅಂದರೆ ಐ.ಸಿ.ಡಿ.ಎಸ್ (ICDS), ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಟಿ.ಪಿ.ಡಿ.ಎಸ್ (TPDS) ಮತ್ತು ಮಾತೃತ್ವದ ಹಕ್ಕುಗಳು. ಈ ನಾಲ್ಕು ಯೋಜನೆಗಳ ಮೂಲಕ ದೊರೆಯುವ ಸೇವೆಗಳು ಈಗ ಕಾನೂನಾತ್ಮಕವಾಗಿ ಬೇಡಿಕೆ ಇಡಬಹುದಾದ ಹಕ್ಕುಗಳಾಗಿವೆ. ಆದ್ದರಿಂದ ಅನುಷ್ಠಾನದಲ್ಲಿ ಜನರನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ವ್ಯವಸ್ಥೆಯನ್ನು ಜವಾಬ್ದಾರಿಯುತ, ಪಾರದರ್ಶಕ ಹಾಗೂ ಸಮಾನತೆಯ ತತ್ವದ ಮೇಲೆ ಕಾರ್ಯ ನಿರ್ವಹಿಸಬೇಕು, ಅನ್ನೋದು ನನ್ನ ನಂಬಿಕೆ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಆಹಾರ ಸುರಕ್ಷತೆ ಹಾಗೂ ಅದರೊಂದಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಭಾವಿಸಿದ್ದೇನೆ. ಎಲ್ಲರೂ ಒಟ್ಟಾಗಿ ಬದ್ಧತೆಯಿಂದ ಹಕ್ಕು ಆಧಾರಿತ ದೃಷ್ಟಿಕೋನದೊಂದಿಗೆ ಈ ಕಾಯ್ದೆಯನ್ನು ಅದರ ನಿಜವಾದ ಅರ್ಥದಲ್ಲಿ ಜಾರಿಗೆ ತಂದರೆ ಆಹಾರದ ಹಕ್ಕನ್ನು ಸಹಕಾರಗೊಳಿಸುವಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗುವುದು. ಭಾರತದಲ್ಲಿ ಆಹಾರ ಭದ್ರತೆ, ಅದು ಹಕ್ಕು ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ಹಕ್ಕಿಗೆ ಕಾನೂನಾತ್ಮಕ ಬಲ ನೀಡಿದ ಮಹತ್ವದ ಕಾಯ್ದೆ ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,
ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸರಿಯಾಗಿ ಜಾರಿಗೆ ಬರಬೇಕು. ಅದಕ್ಕೆ ಅಧಿಕಾರಿಗಳು ಆಹಾರದ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಅವರ ಸಮಸ್ಯೆಗಳನ್ನ ಕೇಳಬೇಕು. ದೂರುಗಳಿದ್ದರೆ ಅದನ್ನ ಸರಿಮಾಡಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ ತೂಕದಲ್ಲಿನ ಮೋಸವನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ತರಲು, ಅಂಗಡಿಗಳಲ್ಲಿ ‘ಜಿಯೋ ಫೆನ್ಸಿಂಗ್’ (Geo-fencing) ತಂತ್ರಜ್ಞಾನವನ್ನು ಅಳವಡಿಸುವುದು ಅವಶ್ಯಕ, ಇದು ಅಂಗಡಿಯ 10 ಮೀಟರ್ ಒಳಗೆ ಮಾತ್ರ ವ್ಯವಹಾರ ನಡೆಯುವಂತೆ ಮಾಡುತ್ತದೆ, ಈವರೆಗೆ ತೂಕದಲ್ಲಿ ವ್ಯತ್ಯಾಸ ಮತ್ತು ಇತರ ಅಕ್ರಮಗಳಿಗಾಗಿ ಸುಮಾರು 23 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳ ತಂಡೊಂದಿಗೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಬಡ ಜನರಿಗೆ ಸಿಗಬೇಕಾದ ಪಡಿತರ ಸರಿಯಾದ ತೂಕದಲ್ಲಿ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಸಭೆಗೆ ತಿಳಿಸಿದರು.
ಆಹಾರ ಭದ್ರತಾ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ , ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣ, ಕೆ.ಎಸ್. ವಿಜಯಲಕ್ಷ್ಮಿ, ರೋಹಿಣಿ ಪ್ರಿಯಾ, ಸದಸ್ಯ ಕಾರ್ಯದರ್ಶಿ ಮತ್ತು ಅಪರ ನಿರ್ದೇಶಕರಾದ ಸುಜಾತಾ ಹೊಸಮನಿ , ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

