ದಾವಣಗೆರೆ, ಮೇ 20: ಬೆಂಗಳೂರಿನ ಕೃಷಿ ಇಲಾಖೆಯ ಕೇಂದ್ರ ಕಛೇರಿಯ ಸಂಗಮ ಸಭಾಂಗಣದಲ್ಲಿ ಮೇ 18 ರಿಂದ 19 ರವರೆಗೆ ಆಯೋಜಿಸಲಾಗಿದ್ದ 2026-27ನೇ ಸಾಲಿನ ಕೃಷಿ ಇಲಾಖೆಯ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರದಲ್ಲಿ, ಕೃಷಿ ಭಾಗ್ಯ ಯೋಜನೆಯಡಿ ಉತ್ತಮ ಪ್ರದರ್ಶಿಕೆಗಳನ್ನು ಪ್ರಸ್ತುತಪಡಿಸಿದ ದಾವಣಗೆರೆ ಜಿಲ್ಲೆಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪುರಸ್ಕಾರ ಲಭಿಸಿದೆ.

2025-26ನೇ ಸಾಲಿನಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಈ ಎರಡು ದಿನಗಳ ಕಾರ್ಯಾಗಾರವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸಿದ್ದರು. ಕೃಷಿ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ್ ಹಾಗೂ ಕೃಷಿ ನಿರ್ದೇಶಕರಾದ ಡಾ. ಜಿ.ಟಿ. ಪುತ್ರ ಅವರು ಉಪಸ್ಥಿತರಿದ್ದು, ಇಲಾಖೆಯು ಸಾಧಿಸಿದ ಭೌತಿಕ ಹಾಗೂ ಆರ್ಥಿಕ ಪ್ರಗತಿ ಮತ್ತು ಮುಂಬರುವ ಮುಂಗಾರು ಹಂಗಾಮಿನ ಸಿದ್ಧತೆಗಳ ಕುರಿತು ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಕೃಷಿ ಭಾಗ್ಯ’ ಅಡಿಯಲ್ಲಿ ಕೃಷಿ ಹೊಂಡಗಳ ಅನುಷ್ಠಾನದ ಕುರಿತು ದಾವಣಗೆರೆ ಜಿಲ್ಲೆಯು ಅತ್ಯುತ್ತಮ ಪ್ರದರ್ಶಿಕೆಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಈ ಗೌರವ ಸಂದಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀ ಜಿಯಾವುಲ್ಲಾ ಕೆ., ಉಪ ಕೃಷಿ ನಿರ್ದೇಶಕರುಗಳಾದ ಶ್ರೀಮತಿ ಭಾರತಮ್ಮ, ಶ್ರೀ ರೇವಣಸಿದ್ದನಗೌಡ ಹೆಚ್.ಕೆ., ಶ್ರೀ ತಿಪ್ಪೇಸ್ವಾಮಿ ಆರ್. ಹಾಗೂ ಸಹಾಯಕ ಕೃಷಿ ನಿರ್ದೇಶಕರುಗಳಾದ ಶ್ರೀ ಶ್ರೀಧರಮೂರ್ತಿ ಡಿ.ಎಂ., ಶ್ರೀ ನಟರಾಜ್, ಶ್ರೀ ವಿಶ್ವನಾಥ್, ಶ್ರೀ ಅರುಣ್ ಕುಮಾರ್ ಮತ್ತು ಶ್ರೀಮತಿ ಶ್ವೇತಾ ಅವರುಗಳು ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
