ದಾವಣಗೆರೆ ಅ.10
ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಗ್ರಾಮ
ವಾಸ್ತವ್ಯವನ್ನು ಮತ್ತೊಮ್ಮೆ ಆರಂಭಿಸಲು ಸರ್ಕಾರ ಚಾಲನೆ
ನೀಡುತ್ತಿದ್ದು, ಇದೇ ಅಕ್ಟೋಬರ್ 16 ರಂದು ಹೊನ್ನಾಳಿ
ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಮಾನ್ಯ
ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಮಾನ್ಯ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮ
ವಾಸ್ತವ್ಯ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ
ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಾನ್ಯ ಮುಖ್ಯಮಂತ್ರಿಗಳು ಕುಂದೂರು
ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ಗ್ರಾಮ ವಾಸ್ತವ್ಯಕ್ಕೆ
ಚಾಲನೆ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಪ್ರಸಕ್ತ
ಸರ್ಕಾರ ರೈತರು, ಕಾರ್ಮಿಕರು, ಮಹಿಳೆಯರಿಗೆ
ಹಾಕಿಕೊಂಡಿರುವ ಕಾರ್ಯಕ್ರಮಗಳು ಹಾಗೂ ವಿವಿಧ
ಫಲಾನುಭವಿಗಳಿಗೆ ಸವಲತ್ತು ವಿತರಿಸುವ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿವಿಧ ಇಲಾಖೆಗಳಿಂದ
ಏರ್ಪಡಿಸಿರುವ ಮಾಹಿತಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ
ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಮಾನ್ಯ
ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ವಿಶೇಷ
ಅಲಂಕೃತ ಚಕ್ಕಡಿಗಳಲ್ಲಿ ಸ್ಥಳೀಯ ಜಾನಪದ ಕಲಾವಿದರು
ಹಾಗೂ ವಿವಿಧ ಕಲಾತಂಡಗಳೊಂದಿಗೆ ಆನೆ
ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಈ
ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಈ ಹಿಂದೆ ನಡೆದ
ಗ್ರಾಮವಾಸ್ತವ್ಯಗಳಿಗಿಂತ ವೈವಿಧ್ಯ ಹಾಗೂ ವಿಶಿಷ್ಟವಾಗಿರಲಿದ್ದು
ಕಾರ್ಯಕ್ರಮದ ಸದುಪಯೋಗವನ್ನು ಅವಳಿ
ತಾಲ್ಲೂಕುಗಳ ಸಾರ್ವಜನಿಕರಿಗೆ ಸಿಗಬೇಕೆಂಬುದು ನಮ್ಮ
ಸಂಕಲ್ಪವಾಗಿದೆ ಎಂದರು.
ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಮೊದಲ ಬಾರಿ ಮಾನ್ಯ
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿ
ಕಾರ್ಯಕ್ರಮ ನಡೆಸಿಕೊಡಲಿದ್ದು, ಕಂದಾಯ ಇಲಾಖ
ಸಚಿವರು ಗ್ರಾಮ ವಾಸ್ತವ್ಯ ಮಾಡುವರು. ಈ ನಿಟ್ಟಿನಲ್ಲಿ
ಗ್ರಾಮಸ್ಥರು ವಿಶೇಷ ಕಾಳಜಿ ವಹಿಸಿ ಅಧಿಕಾರಿಗಳೊಂದಿಗೆ ಕೈ
ಜೋಡಿಸಿ ಕಾರ್ಯಕ್ರಮಗಳನ್ನು
ಯಶಸ್ವಿಗೊಳಿಸಿಕೊಡಬೇಕು ಎಂದ ಅವರು,
ಮುಖ್ಯಮಂತ್ರಿಗಳು ಅಂದು ಸಂಜೆ ಬೆಂಗಳೂರಿಗೆ
ತೆರಳಲಿದ್ದಾರೆ ಎಂದರು.
ಅಂದು ಕಂದಾಯ ಸಚಿವರಾದ ಆರ್.ಅಶೋಕ್, ಸಂಸದರಾದ
ಡಾ.ಜಿ.ಎಂ.ಸಿದ್ದೇಶ್ವರ್ ಹಾಗೂ ಜನಪ್ರತಿನಿಧಿಗಳು ಬೆಳಿಗ್ಗೆ 10 ಕ್ಕೆ
ಸುರಹೊನ್ನೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಗ್ರಾಮಸ್ಥರಿಂದ
ಅಹವಾಲುಗಳನ್ನು ಸ್ವೀಕರಿಸಿ ಶೇ.60 ರಿಂದ 70 ರಷ್ಟು
ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಹರಿಸಲಿದ್ದಾರೆ. ನಂತರ
ಮಧ್ಯಾಹ್ನ ಮುಖ್ಯಮಂತ್ರಿಗಳೊಂದಿಗೆ ಕುಂದೂರು
ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡುವ
ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಕಸ್ತೂರಭಾ ವಸತಿ
ಶಾಲೆಯಲ್ಲಿ ವಾಸ್ತವ್ಯ ಮಾಡಿ ಅಂದು ರಾತ್ರಿ ನಡೆಯುವ
ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ
ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಭೆಯಲ್ಲಿದ್ದ ಎಲ್ಲಾ ಜಿಲ್ಲಾ
ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ
ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು ಅದರಲ್ಲೂ
ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಕಾರ್ಮಿಕ, ಆರೋಗ್ಯ,
ಆಹಾರ, ಬೆಸ್ಕಾಂ, ಸಾರಿಗೆ, ಅರಣ್ಯ, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಅಭಿವೃದ್ಧಿ
ನಿಗಮಗಳು ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ
ನೀಡಲಾಗುವ ಸವಲತ್ತುಗಳು, ಸೌಲಭ್ಯಗಳು, ಸಾಲ
ಮಂಜೂರಾತಿ ಸೇರಿದಂತೆ ವಿವಿಧ ಸೌಲಭ್ಯಗಳ ವಿತರಣೆಗಾಗಿ
ಈಗಾಗಲೇ ಎಲ್ಲಾ ಇಲಾಖಾ ಅಧಿಕಾರಿಗಳು ಪಟ್ಟಿಯನ್ನು
ತಯಾರಿಸಿಕೊಂಡಿದ್ದು, ಫಲಾನುಭವಿಗಳನ್ನು
ಕಾರ್ಯಕ್ರಮದಂದು ಕರೆತಂದು ಪುನಃ
ಕರೆದುಕೊಂಡು ಹೋಗುವ ಜವಬ್ದಾರಿಯನ್ನು
ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸುರಹೊನ್ನೆಯಲ್ಲಿ ಬೆಳಿಗ್ಗೆ ಏರ್ಪಡಿಸಿರುವ
ಕಾರ್ಯಕ್ರಮದಲ್ಲಿ ಕಂದಾಯ ಸಚಿವರು, ಸಂಸದರು,
ಅಧಿಕಾರಿಗಳು ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ
ಹೊನ್ನಾಳಿ ಹೆಲಿಪ್ಯಾಡ್ ಬಳಿ ತೆರಳಿ ಮಾನ್ಯ
ಮುಖ್ಯಮಂತ್ರಿಗಳನ್ನು ಸ್ವಾಗತಿಸಿ, ಅವರೊಂದಿಗೆ ಮಾಸಡಿ
ಮೂಲಕ ಕುಂದೂರು ಗ್ರಾಮ ಭೇಟಿ ನೀಡಿ, ಅಲ್ಲಿ ಏರ್ಪಡಿಸಿರುವ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಕಂದಾಯ ಸಚಿವರು
ಗ್ರಾಮ ವಾಸ್ತವ್ಯ ಮಾಡುವರು ಎಂದು ಮಾಹಿತಿ ನೀಡಿದರು.

ಕುಂದೂರು ಹಾಗೂ ಸುರಹೊನ್ನೆ ಗ್ರಾಮದ ರಸ್ತೆ,
ಚರಂಡಿ, ಸಾರ್ವಜನಿಕ ಶೌಚಾಲಯಗಳನ್ನು
ಸ್ವಚ್ಛಗೊಳಿಸಬೇಕು. ಅಂದು ಗ್ರಾಮಗಳಲ್ಲಿ ಕರೆಂಟ್
ಹೋಗದಂತೆ ಬೆಸ್ಕಾಂ ಇಲಾಖೆಯವರು ಕ್ರಮ ವಹಿಸಬೇಕು.
ಎಲ್ಲಾ ಇಲಾಖೆಗಳಿಗೂ ವಹಿಸಿರುವ ಕೆಲಸಗಳನ್ನು
ಜವಬ್ದಾರಿಯಿಂದ ನಿಭಾಯಿಸಿ ಕಾರ್ಯಕ್ರಮ
ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಡಿಹೆಚ್ಓ ಡಾ.ನಾಗರಾಜ್ ಮಾತನಾಡಿ, ಹೊನ್ನಾಳಿ ಹಾಗೂ ನ್ಯಾಮತಿ
ತಾಲ್ಲೂಕು ತಹಶೀಲ್ದಾರ್ ಅವರಿಂದ ಇಲ್ಲಿಯ ಗ್ರಾಮಗಳಲ್ಲಿ
ಕೋವಿಡ್ ನಿಂದ ಮೃತಪಟ್ಟವರ ಪಟ್ಟಿಯನ್ನು
ಸಿದ್ಧಪಡಿಸಿಕೊಂಡಿದ್ದು, ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರ
ನೀಡಲಾಗುವುದು. ಕುಂದೂರು ಗ್ರಾಮದಲ್ಲಿ ಕೋವಿಡ್
ಕಾರಣದಿಂದ ಮೃತಪಟ್ಟವರಿಗೆ ಕಾರ್ಯಕ್ರಮದ ದಿನದಂದು
ಸಿಎಂ ಮೂಲಕ ಪರಿಹಾರ ಒದಗಿಸಲಾಗುವುದು. ಎರಡು
ಗ್ರಾಮಗಳಲ್ಲಿ ಸಂಪೂರ್ಣ ವ್ಯಾಕ್ಸಿನ್ ಆಗಿದೆ. ಇಲ್ಲಿಯ 6-7
ವಿಕಲಚೇತನರಿಗೆ ಹೆಲ್ತ್ ಕಾರ್ಡ್ ಸಿಕ್ಕಿದ್ದು, ಉಳಿದವರಿಗೆ
ತಲುಪಿಸಲಾಗುವುದು ಎಂದು ತಿಳಿಸಿದರು. ನಂತರ ವಿವಿಧ ಇಲಾಖೆ
ಅಧಿಕಾರಿಗಳು ತಮ್ಮ ಇಲಾಖೆಯಿಂದ ಏರ್ಪಡಿಸಲಾಗಿರುವ
ಕಾರ್ಯಕ್ರಮಗಳ ಬಗೆಗೆ ಮಾಹಿತಿಯನ್ನು
ಹಂಚಿಕೊಂಡರು.
ಸಭೆಯ ನಂತರ ಕುಂದೂರು ಗ್ರಾಮಕ್ಕೆ ಭೇಟಿ ನೀಡಿ
ಸ್ಥಳ ಪರಿಶೀಲನೆ ನಡೆಸಿದರು. ಗ್ರಾಮದ ಆಂಜನೇಯ
ದೇವಾಲಯದಲ್ಲಿ ಹೊರಾಂಗಣದಲ್ಲಿ ಗ್ರಾಮಸ್ಥರೊಂದಿಗೆ
ಏರ್ಪಡಿಸಿದ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ
ರೇಣುಕಾಚಾರ್ಯ ಅವರು, ಕಾರ್ಯಕ್ರಮದ ದಿನದಂದು
ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುವುದರೊಂದಿಗೆ
ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ
ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ವಿಜಯ
ಮಹಾಂತೇಶ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್,
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಆಹಾರ
ಇಲಾಖೆಯ ಜೆಡಿ ಮಂಟೆಸ್ವಾಮಿ, ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆ ವಿಜಯಕುಮಾರ್, ತಾಲ್ಲೂಕು ಪಂಚಾಯತ್
ಕಾರ್ಯನಿರ್ವಹಣಾಧಿಕಾರಿ ರಾಮಬೋವಿ, ಸಿಪಿಎ ನಾಗರಾಜು ಸೇರಿದಂತೆ
ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು
ಉಪಸ್ಥಿತರಿದ್ದರು.
