ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇಡುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..??
ಈ ಸಲದ ಸ್ವಾತಿ ಮಹಾನಕ್ಷತ್ರವು, ಇದೇ ಅಕ್ಟೋಬರ್ 23 ರಿಂದ ನವೆಂಬರ್ 5 ರ ವರೆಗಿದೆ. ಈ ದಿನಗಳಲ್ಲಿ ಬೀಳುವ ಮಳೆ ನೀರು ಸಾದಾ ನೀರಾಗಿರದೆ, ಬಹಳ ಮಹತ್ವ ಉಳ್ಳದ್ದಾಗಿದೆ. ಈ ನೀರನ್ನು ನೀರನ್ನು ಶುಧ್ಧವಾಗಿ ಸಂಗ್ರಹಿಸುವುದೂ ಒಂದು ನಾಜೂಕಿನ ಕೆಲಸ. ಮಳೆ ನೀರು ನೆಲಕ್ಕೆ ಬೀಳುವ ಮೊದಲೇ ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ..!!
ಚಿಪ್ಪಿನೊಳಗೆ ಬಿದ್ದ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಒಂದು ಹನಿಯಿಂದ ಅನರ್ಘ್ಯ ಮುತ್ತು ರೂಪುಗೊಳ್ಳುವುದೆಂದು ಕೇಳಿದ್ದೇವೆ. ಅದೇ ನೀರು ಕೆಲವು ರೋಗಗಳಿಗೂ ದಿವ್ಯ ಔಷಧಿಯಾಗಿರುವುದು ವಿಶೇಷವಲ್ಲವೇ..? ಸ್ವಾತಿ ಮಳೆನೀರಿನ ಮಹತ್ವವು ಸ್ವತ: ನನ್ನ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಆಶ್ಚರ್ಯ! ನನ್ನ ಎಡ ಕೈಯ ಕಿರುಬೆರಳಿನ, ಉಗುರಿನ ಬುಡದಲ್ಲಿ ಒಮ್ಮಿಂದೊಮ್ಮೆಲೆ ಕೆಂಪಾಗಿ ನೋವು ಪ್ರಾರಂಭವಾಯ್ತು. ತಿಂಗಳುಗಟ್ಟಲೆ ಔಷಧೋಪಚಾರ ನಡೆಯಿತೆನ್ನಿ.. ಯಾವ ವೈದ್ಯರನ್ನೂ ಬಿಡಲಿಲ್ಲ. ಹೊಮಿಯೊಪತಿ, ಆಯುರ್ವೇದ ಎಲ್ಲವೂ ಮುಗಿಯಿತು. ಜಪ್ಪಯ್ಯ ಎಂದರೂ ನೋವು ಕಡಿಮೆಯಾಗಲಿಲ್ಲ..6ತಿಂಗಳು ಕಳೆಯಿತು. ಕಣ್ಣಿಗೆ ದಿನಾ ಬೆಳಗ್ಗೆ ಎರಡೆರಡು ಬಿಂದು ಸ್ವಾತಿ ನೀರು ಹಾಕುತ್ತಿದ್ದೆ. ಹಾಂ..ಇದನ್ನು ಮರೆತು ಬಿಟ್ಟೆನಲ್ಲ ಎನಿಸಿತು. ಇದನ್ನೂ ಯಾಕೆ ಪ್ರಯೋಗಿಸಿ ನೋಡಬಾರದು ಎಂದುಕೊಂಡು, ಸಮಯ ಸಿಕ್ಕಾಗಲೆಲ್ಲಾ ನೋವಿರುವ ಉಗುರಿಗೆ ಹಾಕುತ್ತಾ ಬಂದಾಗ ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಬರಲು ಪ್ರಾರಂಭವಾಯಿತು. ಸರಿಯಾಗಿ ಎರಡು ತಿಂಗಳುಗಳಲ್ಲಿ ಪೂರ್ತಿ ಉಗುರು ಸರಿಯಾಗಿ ಬಂದಿತ್ತು! ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ. ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಲು ಕೂಡಾ ಉಪಯೋಗವಾಗುತ್ತದೆ. ನನ್ನ ಈ ಸ್ವಾನುಭವಗಳನ್ನು ಇತರರಿಗೂ ತಿಳಿಸಿ, ಅವರು ಕೂಡಾ ಇದರ ಉಪಯೋಗ ಪಡೆಯುವಂತಾಗಲು ಸಹಕರಿಸುತ್ತಿರುವೆ. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ.
ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು ಬಹಳ ಪ್ರಚಾರ ಪಡೆದಿಲ್ಲ. ಅಗ್ಗದ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯಿಸುವ ನಮ್ಮ ಸರಕಾರ ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಸಂಶೋಧನೆ ನಡೆಸಿದರೆ ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು.ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಿ ಅದರ ಸದುಪಯೋಗವಾಗಲಿ ಎಂದು ಹಾರೈಸೋಣ.
ಶ್ರೀ|| ವೇ|| ಸಿ ಕೊಟ್ರೇಶಯ್ಯ ಕಲ್ಯಾಣಮಠ
ಜ್ಯೋತಿಷ್ಯ ಡಿಪ್ಲೊಮ ವೀರಶೈವಾಗಮ ಪ್ರವೀಣ “ರಶ್ಮಿ ನಿಲಯ” ಸುಭಾಷ್ ನಗರ, ಎರಡನೇ ತಿರುವು ಶ್ರೀ ಸಿದ್ದೇಶ್ವರ ಶಾಲೆ ಹಿಂಭಾಗ, ಸೊರಬ ರಸ್ತೆ, ಸಾಗರ ಪೋ:9448782619

Leave a Reply

Your email address will not be published. Required fields are marked *