ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಮತ ಎಣಿಕೆಯು ಮೇ 04 ರಂದು ಹಳೇ ಪಿ.ಬಿ. ರಸ್ತೆಯಲ್ಲಿರುವ ಡಿಆರ್ಆರ್ ಶಾಲೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಮತ್ತು ಭದ್ರತೆಯ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗ:
ಮೇ 4 ರಂದು ಬೆಳಗ್ಗೆ 05.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ಹಳೇ ಪಿ.ಬಿ. ರಸ್ತೆಯ ಎಪಿಎಂಸಿ ಫ್ಲೈ ಓವರ್ನಿಂದ ಡಿಸಿಎಂ ಅಂಡರ್ ಬ್ರಿಡ್ಜ್ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬೆಂಗಳೂರು ಮತ್ತು ಚಿತ್ರದುರ್ಗ ಮಾರ್ಗವಾಗಿ ಬಾಡ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಬರುವ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಮತ್ತು ಎಲ್ಲಾ ಭಾರಿ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳು ಎಪಿಎಂಸಿ ಎತ್ತಿನ ಸಂತೆ ಮುಖಾಂತರ ಎಪಿಎಂಸಿ ಒಳಗಿನ ರಸ್ತೆಯ ಮೂಲಕ ಆರ್.ಎಂ.ಸಿ. ಫ್ಲೈ ಓವರ್ ಮಾರ್ಗವಾಗಿ ಬಸವೇಶ್ವರ ದೇವಸ್ಥಾನ, ಗಣೇಶ ಹೋಟೆಲ್ ಸರ್ಕಲ್ ಹಾಗೂ ಈರುಳ್ಳಿ ಮಾರ್ಕೆಟ್ ಮುಖಾಂತರ ಹಳೇ ಪಿ.ಬಿ. ರಸ್ತೆಯನ್ನು ತಲುಪಲು ಸೂಚಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ಚುನಾವಣಾ ಏಜೆಂಟರುಗಳು ಹಾಗೂ ಮತ ಎಣಿಕಾ ಕೇಂದ್ರಕ್ಕೆ ಬರುವವರು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮೊಬೈಲ್ ಫೋನ್ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.

