ದಾವಣಗೆರೆ , ಆಗಸ್ಟ್ 06 : ಆಧುನಿಕ ತೋಟಗಾರಿಕೆ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳಬೇಕು , ಪ್ರಸ್ತುತ ರೈತರು ಉಪಯೋಗಿಸುತ್ತಿರುವ ಸಾಂಪ್ರದಾಯಿಕ ಮೈಕ್ರೋ ಟ್ಯೂಬ್ ಪದ್ಧತಿಯಿಂದ ‘ಎಮಿಟರ್ ಹಾಗೂ ‘ಪ್ರೆಷರ್ ಕಾಂಪನ್ಸೇಟಿಂಗ್ ವ್ಯವಸ್ಥೆಗೆ ಬದಲಾಗುವುದರಿಂದ ಅಪಾರ ಪ್ರಮಾಣದ ನೀರನ್ನು ಉಳಿಸಬಹುದು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ನಗರದ ಪಿ.ಬಿ. ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಹನಿ ನೀರಾವರಿ ಪದ್ದತಿ ಅಳವಡಿಕೆ ಹಾಗೂ ಹನಿ ನೀರಾವರಿ ಉಪಕರಣಗಳ ಬಳಕೆ ಕುರಿತು ವಿಭಾಗೀಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.
ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಿರುವ ಪ್ರದೇಶಗಳಲ್ಲಿ ‘ಹೈಡ್ರೋಜೆಲ್’ ತಂತ್ರಜ್ಞಾನ ಬಳಸಿಕೊಳ್ಳಬಹುದು, ಇದು ಸಣ್ಣ ಉಂಡೆಗಳಂತಿದ್ದು, ನೀರನ್ನು ಹೀರಿಕೊಂಡು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಮತ್ತು ಗಿಡಗಳಿಗೆ ಹಂತ ಹಂತವಾಗಿ ನೀರನ್ನು ಒದಗಿಸಲು ನೆರವಾಗುತ್ತದೆ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದು ಮತ್ತು ತಾಂತ್ರಿಕ ನೀರಾವರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇಂದಿನ ರೈತರಿಗೆ ಕಡ್ಡಾಯವಾಗಿದೆ ಎಂದರು.
ರೈತರು ಕಾಲಕ್ಕೆ ತಕ್ಕಂತೆ ಆಧುನಿಕ ತೋಟಗಾರಿಕಾ ಉಪಕರಣಗಳನ್ನು ಉಪಯೋಗಿಸಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಇದರಿಂದ ರೈತರ ಶ್ರಮ ಮತ್ತು ನೀರನ್ನು ಉಳಿಸಬಹುದು ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಸಬ್-ಸರ್ಫೇಸ್ ಇರಿಗೇಷನ್ ಮಣ್ಣಿನ ಅಡಿಯಲ್ಲಿ ನೀರಾವರಿ ಮಾರ್ಗಗಳನ್ನು ಅಳವಡಿಸುವುದರಿಂದ ಹೊಲ ಉಳುಮೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ಮೇಲ್ಮೈಯಲ್ಲಿರುವ ಲ್ಯಾಟ್ರಲ್ ಪೈಪ್ಗಳನ್ನು ಪದೇ ಪದೇ ಸುತ್ತುವ ಮತ್ತು ತೆಗೆಯುವುದು ತಪ್ಪುತ್ತದೆ ಎಂದರು.
ರೈತರು ಕೇವಲ ಬೆಳೆ ಬೆಳೆಯುವವರಲ್ಲ, ಅವರು ಸಮಾಜಕ್ಕೆ ಹಿರಿಯರು ಮತ್ತು ಗುರುಗಳು. ಇಂದಿನ ಆಧುನಿಕ ಯುಗದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ವಕೀಲ ವೃತ್ತಿಗಿಂತ ಕೃಷಿ ಕ್ಷೇತ್ರವೇ ಅತ್ಯಂತ ಕಠಿಣ ಹಾಗೂ ಸವಾಲಿನದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ಆರ್ಥಿಕತೆ, ಎಂಜಿನಿಯರಿಂಗ್, ಆಸ್ಪತ್ರೆ ಅಥವಾ ಕಾರ್ಖಾನೆಗಳನ್ನು ನಡೆಸುವುದು ಸುಲಭವಾಗಿರಬಹುದು, ಆದರೆ ಕೃಷಿಯಲ್ಲಿ ಎದುರಾಗುವ ಸವಾಲುಗಳು ಮತ್ತು ಮಾರ್ಪಾಡುಗಳು ಬೇರೆ ಯಾವುದೇ ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಡಿಕೆ ತೋಟಗಳಲ್ಲಿ ಕೇವಲ ಒಂದೇ ಬೆಳೆಯ ಮೇಲೆ ಅವಲಂಬಿತರಾಗದೆ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಲಾಭದಾಯಕ. ಅಡಿಕೆ ಗಿಡಗಳ ಮಧ್ಯೆ ಕೊಕೋ , ಏಲಕ್ಕಿ ಹಾಗೂ ಮೆಣಸಿನ ಗಿಡಗಳನ್ನು ಬೆಳೆಯುವುದರಿಂದ ಮಣ್ಣಿನ ತೇವಾಂಶ ಕಾಯ್ದುಕೊಳ್ಳಲು ಮತ್ತು ಹೆಚ್ಚುವರಿ ಆದಾಯ ಪಡೆಯಲು ಸಾಧ್ಯವಾಗುತ್ತದೆ ಹರಪನಹಳ್ಳಿ ಭಾಗದಲ್ಲಿ ಅಡಿಕೆ ನಡುವೆ ಕಾಫಿ ಹಾಗೂ ಸೇಬು ಬೆಳೆಯುವ ಯಶಸ್ವಿ ಪ್ರಯೋಗಗಳು ನಡೆದಿವೆ ಎಂದು ತಿಳಿಸಿದರು.
ಅಡಿಕೆ ಹಾಗೂ ಏಲಕ್ಕಿ ತೋಟಗಳಲ್ಲಿ ಜೇನುಸಾಕಣೆ ಮಾಡುವುದರಿಂದ ಪರಾಗಸ್ಪರ್ಶ ಪ್ರಕ್ರಿಯೆ ಉತ್ತಮಗೊಂಡು, ಇಳುವರಿ ಹೆಚ್ಚಾಗುತ್ತದೆ. ಆದ್ದರಿಂದ ಜೇನುಸಾಕಣೆಗೆ ಭಯಪಡದೆ ತೋಟಗಳಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೂಟ್ ಐಡಿ (Fruit ID) ನೋಂದಣಿ ಕಡ್ಡಾಯ: ಸರ್ಕಾರದ ಸಹಾಯಧನ ಹಾಗೂ ವಿವಿಧ ಯೋಜನಾ ಸೌಲಭ್ಯಗಳನ್ನು ಪಡೆಯಲು ‘ಸೆಂಟ್ರಲ್ ಪ್ರೂಟ್ ಐಡಿ’ ಮಾಡಿಸುವುದು ಅತ್ಯಗತ್ಯ. ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರಿಗೂ ಈ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.
ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಬಸವನಗೌಡ ರವರು ರೈತರಿಗೆ ತೋಟಗಾರಿಕೆ ಪದ್ದತಿ ಹಾಗೂ ನೀರಾವರಿ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ರೈತರಿಗೆ ಸಾವಯವ ಗೊಬ್ಬರ ಮತ್ತು ಜೇನು ಪೆಟ್ಟಿಗೆಯನ್ನು ವಿತರಿಸಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಿಕಾಂತ್, ಸಹಾಯಕ ನಿರ್ದೇಶಕಿ ರೇಷ್ಮಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ ಹಾಗೂ ರೈತರು ಭಾಗವಹಿಸಿದ್ದರು.
